ಡೈರಿ ನ್ಯೂಸ್ !





ಪ್ರಿಯ ವೀಕ್ಷಕರೇ ಇವನೇ ನೋಡಿ ತಂಟೆ ರಾಮ.. ಇವನು ರೌಡಿ ಆಗುವ ಮುನ್ನ ಎಲ್ಲರ ರೀತಿ ಸಾಮಾನ್ಯ ಹುಡುಗ ಆಗಿದ್ದ ಕಣ್ರೀ. ಅವನ ಬಗ್ಗೆ ನಾನು ಒಂದು ಸ್ಟೋರಿ ಹೇಳೋದಿದೆ. ಬೈದ ಬೈ  ನೋಡೋಕೆ ಒಳ್ಳೆ ರಾಜ ಕುಮಾರನ ಥರ ಇರೋ ತಂಟೆ ರಾಮಾ ಗುಣದಲ್ಲೂ ರಾಜ ಕುಮಾರನೇ ಕಣ್ರೀ.. ! ಇಂತಹ ಶೈಲಿಯಿಂದ ಮನ ಗೆದ್ದ ನಿರೂಪಕ ರವಿ ಬೆಳಗೆರೆ . ಈಗ ಜನಶ್ರೀಯ ಸಿ ಇ ಒ ಆಗಿರುವ ರವಿ ಬೆಳಗೆರೆ ಬಗ್ಗೆ ವೀಕ್ಷಕರಿಗೆ ಬಹಳಷ್ಟು ನಿರೀಕ್ಷೆಗಳಿವೆ. ಈಟೀವಿಯಲ್ಲಿ ಇದ್ದಾಗ ಜಂಟಲ್ ಮ್ಯಾನ್ಗಳ ನಡುವೆ ಗಂಟಲ್ ಮ್ಯಾನ್ ಆಗಿದ್ದರು. ಅಲ್ಲಿಗೆ ಅದು  ಸಾಕಿತ್ತು.

 
ಆದರೇ ಈಗ ಅವರು ಒಂದೊಳ್ಳೆ ಸಂಸ್ಥೆಯ ಜವಾಬ್ದಾರಿ ಹೊತ್ತಿರುವಾಗ,  ಗಂಟಲ್ ಜಾಸ್ತಿ ಕೆಲಸಕ್ಕೆ ಬರಲ್ಲ. ಅಷ್ಟೇ ಅಲ್ಲದೇ ಈಗ ಮುಖ್ಯವಾಗಿ ಬಹಳಷ್ಟು ಕನ್ನಡ ಚಾನೆಲ್ ಗಳಿವೆ. ಅಂದಂಗೆ ನಿಮಗೂ ಗೊತ್ತಿದೆ ರವಿ ಬೆಳಗೆರೆ ಅವರೇ  ಸಾಕಷ್ಟು ಕಡೆ ಜನಶ್ರೀ ವಾಹಿನಿ ಪ್ರಸಾರ ಆಗೋದೇ ಇಲ್ಲ. ಮುಖ್ಯವಾಗಿ ಬೆಂಗಳೂರು ಮಹಾನಗರದಲ್ಲಿ , ರಾಜ್ಯ ರಾಜಧಾನಿಯಲ್ಲಿ ಈ ವಾಹಿನಿ ಬರೋದೇ ಇಲ್ಲ. ಸೆಟ್ ಅಪ್ ಬಾಕ್ಸ್ಗಳ ಕಿರಿಕಿರಿಯಿಂದ  ಅದಕ್ಕಿಂತಲೂ  ಮುಖ್ಯವಾಗಿ ಕೇಬಲ್  ಹಾಕುವವರ ತಲೆಹರಟೆ ಮತ್ತು ತೊಂದರೆಯಿಂದ ದೂರ ಆಗಲು ಡಿಟಿಎಚ್ ಕಡೆಗೆ ಆದ್ಯತೆ ನೀಡಿದ್ದಾರೆ ಜನರು.


ಡಿಟಿಎ
ಡಿಟಿಎಚ್ 
ಸೌಲಭ್ಯ ಹೊಂದಿರುವ ಬಹುಸಂಖ್ಯಾತ ಕನ್ನಡಿಗರ ಮನೆಗಳಲ್ಲಿ ಕನ್ನಡ ವಾರ್ತಾವಾಹಿನಿಗಳಾದ ಜನಶ್ರೀ, ಪಬ್ಲಿಕ್ ಟಿ.ವಿ ಮತ್ತು ರಾಜ್ ವಾಹಿನಿಗಳು ಉಹೂಂ ಬರೋದೇ ಇಲ್ಲ. ಅಂತಹುದರಲ್ಲಿ ನೀವುಗಳು ನೀಡುವ ಉತ್ತಮ ಕಾರ್ಯಕ್ರಮ ಅದೆಷ್ಟರಮಟ್ಟಿಗೆ ವೀಕ್ಷಕರಿಗೆ ತಲುಪುತ್ತದೆ.. ಇದರ ಬಗ್ಗೆ ವಾಹಿನಿಯ ಚೀಫ್ಗಳು ಯೋಚಿಸೋದೇ ಇಲ್ಲ ಯಾಕೇಂತ? ನಾನು ಈ ವಾಹಿನಿಗಳನ್ನು ನಮ್ಮ ಆಫೀಸಿನಲ್ಲಿ ವೀಕ್ಷಿಸೋದು. ಯಾಕೇಂದ್ರೆ ನನ್ನ ಮನೆಯಲ್ಲಿ ಈ ವಾಹಿನಿಗಳು ಪ್ರಸಾರ ಆಗಲ್ಲ ! 

 ಮತ್ತೊಂದು ಸಂಗತಿ ರವಿ ಬೆಳಗೆರೆ ಜನಕ್ಕೆ ಹೆಚ್ಚು ಪರಿಚಿತವಾಗಿದ್ದು ಈ ಟೀವಿಯ ಕ್ರೈಂ ಡೈರಿಯಿಂದ. ಜನಶ್ರೀಯಲ್ಲಿ ಪ್ರಸಾರ ಆಗೋ ಕಾರ್ಯಕ್ರಮದ ಹೆಸರು ಕ್ರೈಂ ನ್ಯೂಸ್... ರವೀ ಕಾರ್ಯಕ್ರಮದ ಅಂತ್ಯದಲ್ಲಿ ಕ್ರೈಂ ನ್ಯೂಸ್ ಅನ್ನೋ ಬದಲು ಕ್ರೈಂ ಡೈರಿ ಎಂದು ಹೇಳಿದ್ರು... ಆಗುತ್ತೆ ಬಿಡಿ ಹಾಗೆ !

ನೀರಿನ ಮಹಿಮೆ !

ಅತ್ಯಂತ ಖೇದಕರ ಅನ್ನಿಸುವುದು ಸಾವಿನ ಸುದ್ದಿ. ಅದಕ್ಕಿಂತಲೂ ಆತ್ಮಹತ್ಯೆಯ ಬಗ್ಗೆ ಪ್ರಸಾರ ಮಾಡುತ್ತಾರಲ್ಲ ಅದು ಮಾತ್ರ ತುಂಬಾ ನೋವನ್ನು ಉಂಟು ಮಾಡುತ್ತದೆ. ಟೀವಿ ನೈನ್ ವಾಹಿನಿಯಲ್ಲಿ ನಿನ್ನೆ ಸಂಜೆ ಐಶ್ವರ್ಯ ಅನ್ನುವ ಹುಡುಗಿ ಬಗ್ಗೆ , ಆಕೆಯ ಆತ್ಮಹತ್ಯೆಯ ಕುರಿತಾದ ಕಾರ್ಯಕ್ರಮ ಪ್ರಸಾರ ಮಾಡ್ತಾ ಇತ್ತು. ಹರೆಯದ ಮುದ್ದಾದ ಮಗು. ಕನಸುಗಳು ರಾಶಿರಾಶಿ . ಅಂತಹವಳ ಸಾವು ಅದೂ ಒಬ್ಬ ಪೀಡಕನಿಂದ ಅನ್ನೋದು ವೀಕ್ಷಿಸಿದಾಗ ಹೆಚ್ಚು ಬೇಸರ ಆಯ್ತು. ಏನೇ ಹೇಳಿ ಹೆಣ್ಣುಮಕ್ಕಳಿಗೆ ರಕ್ಷಣೆ ಕಡಿಮೆ. 
ನಾನು ಮೊದಲು ಕೆಲಸ ಮಾಡುತ್ತಿದ ಕಡೆ ಕೂರ್ಗ್ ಹೆಣ್ಣುಮಗಳು ಸಹ ನನ್ನ ಜೊತೆ ಕೆಲಸ ಮಾಡುತ್ತಿದ್ದಳು. ತುಂಬಾ ಸುಂದರಿ. ನಾನು ಅಲ್ಲಿ ಕೆಲಸಕ್ಕೆ ಸೇರಿದ ಸ್ವಲ್ಪ ದಿನದಲ್ಲೇ ಆಕೆಯ ತಾಯಿ ಮರಣ ಹೊಂದಿದ ವಿಷಯ ತಿಳಿಯಿತು. ಅದು ಅಸ್ವಾಭಾವಿಕ. ಆಕೆ ಊರಿಗೇಂತ ಹೊರಟಿದ್ದರು ಸ್ವಲ್ಪ ಲಂಪಟರು ಆಕೆಯನ್ನು ಅತ್ಯಾಚಾರ ಮಾಡಿ ಸಾಯಿಸಿದ್ದರು. ಆ ವಿಷಯ ಕೇಳಿದ ಬಳಿಕ ದಿಗ್ಭ್ರಾಂತಿ ಆಗಿತ್ತು ನನಗೆ. ಈಗಲೂ ಅದನ್ನು ನೆನಪಿಸಿಕೊಂಡರೆ ಆತಂಕ-ಭಯ ಆಗುತ್ತದೆ.

ಈ ಕಾರ್ಯಕ್ರಮಕ್ಕೆ ಧ್ವನಿ ಕೊಟ್ಟವರು ಸ್ವಾಮಿ ಮುತ್ತೂರು . ರವಿ ಬೆಳಗೆರೆ ಕ್ರೈಂ ಡೈರಿಯಲ್ಲಿ ಈತ ಸಹಾಯಕರಾಗಿದ್ದರು.(ನನ್ನ ಎಣಿಕೆ ಸರಿ ಇರಬಹುದು ಅಂತ ತಿಳೀತಿನಿ ). ಯಾಕೇಂದ್ರೆ ಆ ಲೆಕ್ಕದಲ್ಲಿ ಅಲ್ಪ ದಿನಗಳ ಕಾಲ ಅಂದ್ರೆ ಕೇವಲ ಬೆರಳೆಣಿಕೆಯಷ್ಟು ದಿನಗಳ ಕಾಲ ಇಬ್ಬರೂ  ಕಲೀಗ್ಸ್ ಆಗಿದ್ದೆವು. ಆತ ಕ್ರೈಂ ನ್ಯೂಸ್ ತರಲು ಹೋಗಿ ಬಂದ ಬಳಿಕ ಕೇಸ್ ಗಳ ಲಿಸ್ಟ್ ನನ್ನ ಕೈಲಿ ಬರೆಸುತ್ತಿದ್ದರು. ಅಯ್ಯೋ ನನ್ನ ಸ್ಥಿತಿ ಹೇಗಿದ್ದಿರ ಬಹುದು ! ಸ್ವಾಮಿ ಚೆನ್ನಾಗಿ ನಿರೂಪಣೆ ಮಾಡಿದ್ರು. ಸ್ವಲ್ಪ ರವೀ ಅವರ ಧ್ವನಿಯನ್ನೇ ಇಮಿಟೇಟ್ ಮಾಡ್ತಾ ಇದ್ರು. ಸಮೀನಾ ಈ ಕಾರ್ಯಕ್ರಮ ನಿರೂಪಣೆ ಮಾಡಿದ್ದು.
ಸುವರ್ಣ ವಾಹಿನಿಯಲ್ಲಿ ಅತಿ ಆಸಕ್ತಿ ಅನ್ನಿಸಿದ ಕಾರ್ಯಕ್ರಮ ಮುಂದಿನ 10-15 ವರ್ಷಗಳಲ್ಲಿ ನಮ್ಮ ಬೆಂಗಳೂರು ಯಾರಿಗೂ ಬೇಡ ಆಗುತ್ತೇ ಅನ್ನೋ ಕಾರ್ಯಕ್ರಮ. ಯಾವ ರೀತಿ ಕೆರಗಳು ಲೇಯ್ ಔಟ್ ಗಳಾಗಿವೆ, ನದಿಗಳು ಬತ್ತಿವೆ, ಕೊಳಕು ಕಸಗಳ ಸಾಮ್ರಾಜ್ಯ ಹೀಗೆ ಅನೇಕ ಸಂಗತಿಗಳು. ವೀಕ್ಷಕರು ನೋಡಲೇ ಬೇಕಾದ ಕಾರ್ಯಕ್ರಮ . ಇದನ್ನು ನವಿತಾ ಜೈನ್ ನಿರೂಪಣೆ ಮಾಡಿದ್ದು. ಚಂದನ್ ಶರ್ಮ ವಾಯ್ಸ್ ಓವರ್ ಮಾಡಿದ್ದು ಅಂತ ಅನ್ನಿಸ್ತು. ಇತ್ತೀಚೆಗೆ ನವಿತಾ ಜಾಸ್ತಿ ಕೂಗಿ ಕೂಗಿ ನ್ಯೂಸ್ ಓದೋದಲ್ಲದೇ , ಕೂಗುತ್ತಾ  ನಿರೂಪಣೆ ಮಾಡುವುದಕ್ಕೆ ಗಮನ ನೀಡಿದ್ದಾರೆ. ಮೋಸ್ಟಲಿ ಸುವರ್ಣ ನ್ಯೂಸ್ ಆಫೀಸಿನ ನೀರಿನ ಮಹಿಮೆ ಅಂತ ಕಾಣುತ್ತೇ! 

ಸುಮ್ನೇನಾ?

ಸಾಮಾನ್ಯವಾಗಿ ಅಡುಗೆ ಕಾರ್ಯಕ್ರಮದ ಬಗ್ಗೆ ವೀಕ್ಷಕರಿಗೆ ಎಷ್ಟು ನಿರಾಸಕ್ತಿ ಇದೆಯೋ ಅಷ್ಟೇ ಆಸಕ್ತಿಯೂ ಸಹ ಇದೆ. ಈಗ ಸಾಮಾನ್ಯವಾಗಿ ಪುರುಷ-ಸ್ತ್ರೀ  ಅನ್ನದೇ ಎಲ್ಲರೂ ಇಷ್ಟ ಪಡುವ ಕಾರ್ಯಕ್ರಮವಾಗಿಯೂ ಸಹ ಮಾರ್ಪಟ್ಟಿದೆ. ಅದರಲ್ಲೂ ಮಾಸ್ಟರ್ ಶೆಫ್ ಕಾರ್ಯಕ್ರಮ ಆರಂಭವಾದ ಬಳಿಕ ಅಡುಗೆ ಕಾರ್ಯಕ್ರಮಕ್ಕಿರುವಂತಹ ಜನಪ್ರಿಯತೆ ಹೆಚ್ಚಾಯಿತೆ ವಿನಃ ಕಡಿಮೆ ಆಗಲಿಲ್ಲ. ಆವರೆಗೂ ಕೇವಲ ಚಾನೆಲ್ಗಳು ಗೃಹಿಣಿಯರಿಗೆ ಅವಕಾಶ ಕಲ್ಪಿಸಿ ಅವರಿಗೆ ಅಡುಗೆ ಮಾಡುತ್ತಿತ್ತು. ಅವಧಿ ಕೇವಲ ಕಾಲು ಇಲ್ಲವೇ ಅರ್ಧಗಂಟೆ. ಆದರೆ ಸ್ಟಾರ್ ವಾಹಿನಿಯು ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ವಿದೇಶದಿಂದ ಎರವಲು ತಂದು  ಸ್ಥಳೀಯವಾಗಿ ಮಾರ್ಪಡಿಸಿದಾಗ ಅಡುಗೆ ಬಗ್ಗೆ ಇನ್ನೂ ಒಲವು ಹೆಚ್ಚಾಯಿತು ಅನ್ನ ಬಹುದು. ಈ ಬಾರಿ ಸ್ಟಾರ್ ವಾಹಿನಿಯಲ್ಲಿ ಪುಟ್ಟ ಮಕ್ಕಳದ್ದೇ ಕಾರುಬಾರು. ಅವರುಗಳಿಗೆ ಅಡುಗೆ  ದಿನಸಿ ಬಗ್ಗೆ ಇರುವ ಜ್ಞಾನ ಅನನ್ಯ. ಎಷ್ಟೋ ಸಾಂಬಾರು ಪದಾರ್ಥಗಳ ಬಗ್ಗೆ ದೊಡ್ಡವರಿಗೆ ತಿಳಿಯಲಾಗದೇ ತಬ್ಬಿಬ್ಬು ಆಗಿ ಬಿಡುತ್ತಾರೆ. ಆದರೆ ಮಕ್ಕಳು ಯಾವುದೆ ಅಳುಕಿಲ್ಲದೇ ತಮಗೆ  ಗೊತ್ತಿರುವುದನ್ನು ಹೇಳುವ ಪರಿ ನಿಜಕ್ಕೂ ಖುಷಿ ನೀಡುತ್ತದೆ.

ಸೋನಿ ವಾಹಿನಿಯಲ್ಲಿ ಪ್ರತಿದಿನ ಎಂಟು ಗಂಟೆಗೆ ಇಂತಹ ರಿಯಾಲಿಟಿ ಸೋ ಪ್ರಸಾರ ಆಗುತ್ತದೆ. ಅದರ ವಿಶೇಷತೆ  ಅಂದ್ರೆ  ಅದರಲ್ಲಿ ಮುಖ್ಯವಾಗಿ ಮಾಸ್ಟರ್  ಪ್ರೊಫೆಸರ್ ಸಂಜೀವ್ ಕಪೂರ್  ಮುಖ್ಯ ತೀರ್ಪುಗಾರರು. ಅದರಲ್ಲಿ  ಸಾಮಾನ್ಯ ಗೃಹಿಣಿ ಮತ್ತು ಎಕ್ಸ್ ಪರ್ಟ್ ಶೆಫ್ಗಳು ಭಾಗವಹಿಸಿರುತ್ತಾರೆ.  ಹಿರಿಯ ಹೆಣ್ಣುಮಕ್ಕಳು ಮಾಡುವ ಅಡುಗೆ, ಅವರು ಅಂದಾಜಿನಿಂದ ಕೈ ಬಳಸಿ ಹಾಕುವ  ಸರಿಯಾದ ಅಳತೆ , ಎಲ್ಲವೂ  ಮಾಸ್ಟರ್ ಪ್ರೊಫೆಸರ್ ಗೆ ಸಾಕಷ್ಟು ಬಾರಿ ಆಶ್ಚರ್ಯ ತರಿಸುತ್ತದೆ. ಭಾರತೀಯ ಹೆಣ್ಣುಮಕ್ಕಳು ಅಂದ್ರೆ ಸುಮ್ನೇನಾ?  

ಹಿಂಗೆ ಗೊತ್ತಾ ..!



ಕಾಮಿಡಿ ನೈಟ್ ವಿತ್ ಕಪಿಲ್ ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಒಂದೊಳ್ಳೆಯ ಹಾಸ್ಯ ಕಾರ್ಯಕ್ರಮ. ಇದಕ್ಕೂ ಮುನ್ನ ಪ್ರಸಾರ ಆಗುತ್ತಿದ್ದ ಹಾಸ್ಯ ಕಾರ್ಯಕ್ರಮ ನಗುವಿಗಿಂತ  ಕಿರಿಕಿರಿಯನ್ನೇ ಉಂಟು ಮಾಡ್ತಾ ಇತ್ತು. ಆದರೆ ಕಪಿಲ್ ಶರ್ಮ ಮತ್ತು ಅವರ ಟೀಂ ಹಾಗೂ ಸಿದ್ದು ಸೂಪರ್  .
ಕಪಿಲ್ ಚುರುಕಾದ ಉತ್ತರದಿಂದ  ಕೇವಲ ವೀಕ್ಷಕರನ್ನು ಮಾತ್ರವಲ್ಲದೇ,  ಆ ಕಾರ್ಯಕ್ರಮಕ್ಕೆ ಬರುವ ಸೆಲೆಬ್ರಿಟಿ ಗೆಸ್ಟ್ ಗಳಿಗೂ ಸಹ ಆಪ್ತವಾಗಿದೆ. ಪಾಪ ಇಂದು ಅವರ ಸೆಟ್ ಸುಟ್ಟಿದೆ.. ಅದೇ  ಬೇಜಾರು !
ಕಲರ್ ವಾಹಿನಿಯ ಪ್ರಸ್ತುತ ಆಕರ್ಷಣೆ  ಬಿಗ್ ಬಾಸ್ , ಅದರಲ್ಲಿ ಸಲ್ಮಾನ್ boy. ದಿನೇ ದಿನೇ ಯೌವನವನ್ನು ಹೆಚ್ಚು ಮಾಡಿಕೊಳ್ತಾ ಅಂದಿನ ಅಮ್ಮಂದಿರಿಗೆ ನಿದ್ದೆಗೆಡಿಸಿದ್ದ ಈ boy  ಈಗ ಅವರ ಹೆಣ್ಣುಮಕ್ಕಳ ? ಮುಖ್ಯವಾಗಿ  ಆ ರಿಯಾಲಿಟಿ ಶೋನಲ್ಲಿ ಸಲ್ಮಾನ್ ಖಾನ್  ಡೈಲಾಗ್ ಗಳು, ಸಣ್ಣ ಸಣ್ಣ ಸಂಗತಿಗಳನ್ನು ಎಂಜಾಯ್ ಮಾಡುವ ರೀತಿ ಪ್ರತಿಯೊಂದು ಖುಷಿ  ಪಡುವ ರೀತಿ ..
 ಇಲ್ಲಿರುವ ಸ್ಪರ್ಧಿಗಳಲ್ಲಿ ರಜತ್ ಸಲ್ಮಾನ್ ಆತ್ಮೀಯ ವಲಯಕ್ಕೆ ಸೇರಿರುವ ಕಲಾವಿದ.  ಆತನ ಆಕಾರ , ಸಲ್ಮಾನ್ ಆಕಾರ ಇಬ್ಬರಲ್ಲೂ ಎಷ್ಟೊಂದು ವ್ಯತ್ಯಾಸ.. ! ವಾವ್ ಸಲ್ಮಾನ್ Boy

ಇಲ್ಲಿ ತನಿಷಾನ್ನ ಕಂಡಾಗ  ಉಳಿದ ಸ್ಪರ್ಧಿಗಳು ಈಕೆಗಿರುವ ಹಿನ್ನೆಲೆ ಬಗ್ಗೆ ಕಾನ್ಷಿಯಸ್ ಆಗಿದ್ದಾರಾ ಅಂತ ಅನ್ನಿಸುತ್ತೆ. ಸ್ವಲ್ಪ ಜಾಸ್ತೀನೆ ಪ್ರಾಮುಖ್ಯತೆ ನೀಡ್ತಾ ಇದ್ದಾರೆ ಅಂತ ಅನ್ನಿಸುತ್ತೆ. ಸಕತ್ ತಲೆ ಕೆಟ್ಟು ಹೋಗೋ ಟಾಸ್ಕ್ ಕೊಟ್ಟಾಗ ಎಲ್ಲ ಹಿನ್ನೆಲೆ ದೂರ ಆಗುತ್ತೆ !  ತನಿಷಾ ಮೂಲ ಗುಣ ಹೊರ ಬರುತ್ತೇ!

ಏನೇ ಹೇಳಿ ಗೌಹರ್  ಬೋಲ್ಡ್ ನೆಸ್ ಸಕತ್ ಖುಷಿ ಕೊಡ್ತಾ ಇದೆ. ಕುಶಾಲ್ ಹತ್ರ ಪಪ್ಪಿ ತೆಗೆದುಕೊಳ್ಳುವಾಗ ಇದ್ದ  ಧೈರ್ಯ  ಒಂದು ಸಣ್ಣ ಹುಳ ನೋಡಿದಾಗ ಇರಲಿಲ್ಲ.. ಸಲ್ಮಾನ್ Boy ಹೆಣ್ಮಕ್ಕಳೆ ಹಿಂಗೆ ಗೊತ್ತಾ ..! ಆಂಡಿ ನಿರೀಕ್ಷೆ ಮಾಡಿದಷ್ಟು ಆಸಕ್ತಿ ಹುಟ್ಟಿಸ್ತಾ ಇಲ್ಲ. ಒಟ್ಟಾರೆ ಈ ಬಾರಿ ಬಿಗ ಬಾಸ್ ಅದ್ಯಾಕೊ... ! 

 ಏನೇ ಹೇಳಿ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಜಗಳ ಆಡೋಕೆ ಹೋಗಿರಲಿಲ್ಲ. ಆದರೇ ಇಲ್ಲಿ ಜಗಳಕಾರಣವಿಲ್ಲದೇ ಆಡೋದಲ್ಲದೇ ಕಡೆಗೆ ಹಗ್ ಮಾಡಿಕೊಂಡು ನಾವು ಒಳ್ಳೇ  ಸ್ನೇಹಿತರು ಎನ್ನುವ ನಾಟಕ ! 

ಯಾಕಿಷ್ಟಾ... ಯಾಕಿಷ್ಟಾಂದ್ರೆ !





ಟೀವಿ ವೀಕ್ಷಣೆ  ಮಾಡುವುದನ್ನೇ ಹಾಬಿ ಅಂತ ಬಹಳಷ್ಟು ಜನರು ಹೇಳ್ತಾರೆ. ಛೇ  ಹಾಬಿ ಗೆ ಬೆಲೆನೇ ಇಲ್ಲ ಎಂದು ಸೋ ಕಾಲ್ಡ್ ಬುದ್ದಿವಂತರು ಬೇಸರ ಪಡ್ತಾರೆ.  

 ಏನೇ ಹೇಳಿ ಟೀವಿ ನೋಡದೇ ಇರೋಕೆ ಆಗಲ್ಲ ಅನ್ನುವ ಮಂದಿ ಈಗ ಜಾಸ್ತಿ. ಟೀವಿ ಅಂದ ತಕ್ಷಣ ಅಭಿರುಚಿ-ಆಸಕ್ತಿಗೆ ಅನುಗುಣವಾಗಿ  ಜನರು  ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಲ್ಲಿ ಅವರು ಆಸಕ್ತಿಯಿಂದ ವೀಕ್ಷಿಸುವ ಆಂಕರ್ ಗಳು, ಆಕ್ಟರ್ ಗಳು ಇರ್ತಾರೆ. ನ್ಯೂಸ್  ರೂಮ್ ಮಂದಿ ಬಗ್ಗೇ ನೂ ಹೆಚ್ಚು ಗಮನ ಕೊಟ್ಟು ವೀಕ್ಷಿಸುವ ವೀಕ್ಷಕರಿದ್ದಾರೆ. ಅಯ್ಯೋ ಹೌದ್ರಿ ಹೌದ್ರಿ ! ! 



ನನ್ನ ಕಲೀಗ್ ರೂಪಾಗೆ ಟೀವಿ ನೈನ್  ವರದಿಗಾರ ವಿನಾಯಕ ಗಂಗೊಳ್ಳಿ ಶೈಲಿ ಧಾಟಿ ಅಂದ್ರೆ ಖುಷಿ. ಪಾಪದ ಹುಡುಗ ಹೇಳೋದು ವರದಿ,  ಸಾಮಾನ್ಯವಾಗಿ  ಪ್ರಸಕ್ತ ರಾಜಕೀಯದ  ಸಂಗತಿಗಳು ಅಂದ್ರೆ ಸ್ವಲ್ಪ ಬೋರ್ , ಆ ಬೋರ್ ನ್ನು ಆಸಕ್ತಿದಾಯಕವಾಗಿ ವರದಿಗಾರ ಮಾಡ ಬೇಕೆಂದ್ರೆ ಮಾತಿನ ಶೈಲಿ ಚೆನ್ನಾಗಿರ ಬೇಕು. ಯಾಕಿಷ್ಟ ನಿಮಗೆ ಅಂತ ನಾನು ಆಕೆಯನ್ನು ಕೆಣಕಿದೆ. ತಪ್ಪು ತಿಳಿದಾರು ಎಂದು ಭಾವಿಸಿ ಹೇಳಿದೆ ಯಾಕೇಂದ್ರೆ ನನಗೆ ಸಲ್ಮಾನ್ ಖಾನ್ ಇಷ್ಟ . ಯಾಕಿಷ್ಟ ಅಂದ್ರೆ ಅದಕ್ಕೆ ಸಾವಿರ ಕಾರಣ ಹೇಳ್ತೀನಿ  ಎಂದೆ.  ಅದಕ್ಕೆ ಆಕೆ ಹೇಳಿದ್ದು ಅವರು ಲೈವ್ ನಲ್ಲಿ ನಿರೂಪಣೆ , ತಪ್ಪಿಲ್ಲದೆ ಮಾತನಾಡುವ ಶೈಲಿ ಇಷ್ಟ ಆಗುತ್ತೆ ಅಂದ್ರು, ಹೌದು ವಿನಾಯಕ ನಮಗೂ ಆ ಕಾರಣಕ್ಕೆ ನೀವು ಇಷ್ಟ ಆಗೋದು. ನೋಡಿ ವೀಕ್ಷಕರು ಪ್ರತಿಯೊಂದು ಸಂಗತಿಗೂ ಆದ್ಯತೆ ನೀಡ್ತಾರೆ.  ಇನ್ನೂ ಹಲವಾರು ವರದಿಗಾರರಿದ್ದಾರೆ  ವೀಕ್ಷಕರು ಇಷ್ಟ ಪಡುವಂತಹವರು . 

ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಉಡೀಸ್  ಕಾರ್ಯಕ್ರಮ ಸಕತ್. ಪ್ರಸ್ತುತ ರಾಜಕೀಯ ಅಂಶಗಳು, ಸಿನೆಮಾ ಅಂಶಗಳನ್ನು ಒಳಗೊಂಡ ಕಾರ್ಯಕ್ರಮ. ಇದರ ನಿರೂಪಕ, ಮುಖ್ಯಆಕರ್ಷಣೆ ವಿಶ್ವ. ಹೆಸರಿನಂತೆ ಅಪಾರ –ಅಪರೂಪದ ಪ್ರತಿಭಾವಂತ. ವೈರಸ್ ಆದರಲ್ಲಿ ಆತನ ಹೆಸರು.. ಮಜಾ ಬರುತ್ತೆ  ಕಾರ್ಯಕ್ರಮ. 



ಓಕೆ ಓಕೆ !

ನೋಡಿದ್ರೆ ವಾಹಿನಿಗಳಲ್ಲಿ ನ್ಯೂಸ್ ನೋಡ ಬೇಕು. ಎಂತಾ ಹೆದರಿಕೆ ಹುಟ್ಟಿಸ್ತಾರೆ ಗೊತ್ತಾ ನ್ಯೂಸ್ ರೀಡರ್ಸ್,ಒಂದು ಸಣ್ಣ ಎಳೆ ಅದನ್ನು ಎಳೆದು ಎಳೆದು ಅದಕ್ಕೊಂದು ಸ್ವರೂಪ ನೀಡ್ತಾರೆ. ಮೂಲ ಸುದ್ದಿ ಅಂತಿಮವಾಗಿ ಮತ್ಯೇನೋ ಆಗಿರುತ್ತೆ. ವರದಿಗಾರ, ನಿರೂಪಕರು ಸರಿಯಾಗಿಯೇ ಹೇಳಿದ್ದರೂ ಸಾಮಾನ್ಯ ವೀಕ್ಷಕ ಅದನ್ನು ಬೇರೆಯ ರೀತಿಯಲ್ಲೆ ಅರ್ಥೈಸಿಕೊಳ್ಳುವಂತೆ ಮಾಡಿ ಬಿಡ್ತಾರೆ. ಸ್ಟುಡಿಯೋದಲ್ಲಿ  ಕುಳಿತು ಕೇಳಿದ್ದ ಪ್ರಶ್ನೆಗಳನ್ನು ಬದಲಾಯಿಸಿ ಬದಲಾಯಿಸಿ ಕೇಳಿದ್ರೆ ಅಲ್ಲಿಂದ ಅದೇ ಉತ್ತರ ಬೇರೆ ಬೇರೆ ರೀತಿಯಲ್ಲಿ...

ಜನಶ್ರೀ ವಾಹಿನಿಯಲ್ಲಿ ವಸಂತ್ ಮತ್ತು ವೀಣಾ ಪೂಜಾರಿ ಕೆ.ಸಿ. ಕೊಂಡಯ್ಯ ಅವರ ಬಗ್ಗೆ ವಾರ್ತೆ ಓದುತ್ತಾ, ಜೊತೆಗೆ ಪ್ರಶ್ನೆಗಳ ಸುರಿಮಳೆ ಮಾಡುತ್ತಾ  ಇದ್ರು. ಅದನ್ನು ಸಂಪೂರ್ಣವಾಗಿ ಗಮನಿಸಿದರೆ ಅದು ಕೇವಲ ಒಂದು ಎಳೆ.. ಆದರೆ ಅದನ್ನು ಎಳೆದ ರೀತಿ ಅಬ್ಬಾ! ಏನೇ ಹೇಳಿ ಇಂತಹ ತಾಕತ್ ಇರೋದು ಮಾಧ್ಯಮದವರಿಗೆ ಮಾತ್ರ.
ಪ್ರಶ್ನೆ .-ನಿರೂಪಕರಿಂದ-ಹೌದಾ ಹಾಗಾದ್ರೆ ಯಾಕೆ ಹಾಗಾಯ್ತು, ಉತ್ತರ ವರದಿಗಾರರಿಂದ- ಇಲ್ಲ ಅದಕ್ಕೆ ಹಾಗಾಯ್ತು, ಅದು ಹಾಗೆ ಆಗದೆ ಇದ್ದಿದ್ದರೆ ಏನಾಗುತ್ತಿತ್ತು. ಹಾಗೆ ಆಗದೇ ಇದ್ದಿದ್ದಿದ್ದರೇ ಏನಾಗುತ್ತಿತ್ತು ಎನ್ನುವ ಸಂಗತಿ ಸ್ಪಷ್ಟವಾಗಿ ತಿಳಿದಿಲ್ಲ, ಅದಕ್ಕೆ ಸಂಬಂಧ ಪಟ್ಟಂತೆ ತನಿಖೆ ಆಗ ಬೇಕಿದೆ. ನಿಜಕ್ಕೂ ತನಿಖೆ ಆಗಬೇಕಾ ಏನನ್ನುತ್ತಾರೆ ಸ್ಥಳೀಯರು, ಅವರ ಬಳಿ ಮಾತನಾಡಿದಾಗ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ಹೇಳಿದ್ದಾರೆ, ಆದರೂ ಯಾವುದೇ ನಿರ್ಧಾರಕ್ಕೂ ಬರದಂತಹ ಸ್ಥಿತಿಯಲ್ಲಿ ಅವರಿದ್ದಾರೆ. ಓಕೆ ಓಕೆ ನಿಮ್ಮ ಎಲ್ಲಾ ಮಾಹಿತಿಗಳಿಗೂ  ಧನ್ಯವಾದಗಳು...
ಸಾಕಷ್ಟು ಸರ್ತಿ ಇಂತಹ ಮಜಗಳನ್ನು ತೆಗೆದುಕೊಳ್ಳುವ ಸಲುವಾಗಿ ನ್ಯೂಸ್ ನೋಡ್ತೀನಿ ನಾನು.


ಇಂದು ಪಬ್ಲಿಕ್ ಟೀವಿಯಲ್ಲಿ ನಿರೂಪಕ ರಾಘವ್ ನಡೆಸಿ ಕೊಡುತ್ತಿದ್ದ ಕಾರ್ಯಕ್ರಮ ವೀಕ್ಷಿಸಿದಾಗ  ಕ್ಷಣ ಅರ್ಥ ಆಗಲಿಲ್ಲ. ಅ ಬಳಿಕ ವಿಷಯ ಅರ್ಥ ಆಯ್ತು ಬಿಡಿ. ತಿರುಪತಿ ತಿಮ್ಮಪ್ಪನ ಪಾಪ್ಯೂಲಾರಿಟಿ ಕಡಿಮೆ ಆಯ್ತಾ ಎನ್ನುವ ನೋವು ರಾಘವ್ ದಾಗಿತ್ತು. ಇಲ್ಲ ಎನ್ನುವ ಸಮಾಧಾನ ಅಲ್ಲಿ ನೆರೆದಿದ್ದ ಅತಿಥಿಗಳದ್ದು . ಆಂಧ್ರ ಇಬ್ಭಾಗ ಆಗಿರೋ ಈ ಸಮಯದಲ್ಲಿ ಸಾಮಾನ್ಯರಿಗೆ ತೊಂದರೆ ಆಗ ಬಹುದು ಎನ್ನುವ ಆತಂಕ ಸಾಮಾನ್ಯ. ಅದಷ್ಟೆ ಕಾರಣ ಮತ್ತೇನೂ ಅಲ್ಲ. ಆದ್ರೂ ರಾಘವ್ ಜನಕ್ಕೆ ಚೆನ್ನಾಗಿ ಭಯ ಹುಟ್ಟಿಸಿದ್ರಿ ಕಣ್ರಿ.  ಭಕ್ತರನ್ನು ಆಕರ್ಷಿಸಲು ದಸರೆಯಲ್ಲಿ  ನಡೆಯುವ ಬ್ರಹ್ಮ ರಥೋತ್ಸವದಲ್ಲಿ ಭಕ್ತರಿಗಾಗಿ ವಿಶೇಷ ಲಡ್ಡು ತಯಾರಿಯಲ್ಲಿದೆ ಟಿಟಿಡಿ.. ಜಾಸ್ತಿ ದ್ರಾಕ್ಷಿ ಗೋಡಂಬಿ ಹಾಕಿ  ಮಾಡುವ ಲಡ್ಡು ! 

ಅರೇ ?!



ವಾಹಿನಿಗಳಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳನ್ನು ಅಭಿರುಚಿಗೆ ತಕ್ಕಂತೆ ವೀಕ್ಷಿಸುತ್ತಾರೆ.ಆದಷ್ಟು ರಕ್ತ ಕುದಿಯ ಬೇಕು, ಇಲ್ಲವೇ ಮತ್ತೇರ ಬೇಕು ಅಂತಹ ಕಾರ್ಯಕ್ರಮಗಳಿಗೆ ಹೆಚ್ಚು ವ್ಯಾಲ್ಯೂ. ಆದರೇ ಅದಕ್ಕಿಂತ  ಅಧಿಕ ಪ್ರಾಮುಖ್ಯತೆ ನೀಡುವುದು ಯಾರದೋ ಮನೆಯ ಜಗಳ, ಊರಿನ ಗಲಾಟೆ ಹೀಗೆ ಅನೇಕ ಸಂಗತಿಗಳು ನಿಜಕ್ಕೂ ಅಷ್ಟೊಂದು ಪ್ರಾಮುಖ್ಯತೆ ಇಲ್ಲದೇ ಇದ್ದರೂ ಅದನ್ನು ಎತ್ತಿ ಹಿಡಿಯುವ ಪ್ರಯತ್ನ. ಕೆಲವೊಂದು ಅದೆಷ್ಟರ ಮಟ್ಟಿಗೆ ತಲೆ ಕೆಡುತ್ತೇ ಅಂದ್ರೆ  ದೊಡ್ಡ ಚಾನೆಲ್ ಗಳಿಗಿಂತ  ಸಣ್ಣಪುಟ್ಟ ಚಾನೆಲ್ ವೀಕ್ಷಿಸೋದು ಒಳ್ಳೆಯದು ಎಂದು ಅಂದುಕೊಳ್ತಾರೆ ವೀಕ್ಷಕರು . ಆದರೆ ಅವರು ಹಾಗೆ ಮಾಡಲ್ಲ ಬಿಡಿ.

ಟೀವಿ ನೈನ್ ವಾಹಿನಿಯಲ್ಲಿ ಸ್ವಲ್ಪ ಜಾಸ್ತೀನೆ ಗ್ಲಾಮರ್ ಹೆಣ್ಣು ಮಗಳು ಶೀತಲ್ ಶೆಟ್ಟಿ. ಆಕೆ ಮಾತು, ಕಣ್ಣು ಮಿಟುಕಿಸೋ ರೀತಿ, ನಗು, ಸ್ವಲ್ಪ ಜಾಸ್ತಿನೇ ಫೇಮಸ್ಸು. ಆಕೆ ತಾನು ಮಾಧ್ಯಮದಲ್ಲಿ ಒಂದೊಳ್ಳೆ ಸ್ಥಾನ ಪಡೆಯಲು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಂಡರು. ತಮಾಷೆ ಅಂದ್ರೆ ಆ ಹೆಣ್ಣುಮಗಳನ್ನು ಅನುಸರಿಸೋ ಮಂದಿ ಹೆಚ್ಚು ಇದ್ದಾರೆ. ಎಲ್ಲಾ ಕನ್ನಡ ಚಾನೆಲ್ಗಳಲ್ಲೂ ಇಂತಹ ಧ್ವನಿ ಅಥವಾ ಸ್ಟೈಲು ಹೊಂದಿರುವ ಹೆಣ್ಣುಮಕ್ಕಳು ಇದ್ದೇ ಇದ್ದಾರೆ.ಅರೇ ಶೀತಲ್ ಇಲ್ಲಿಗೆ ಬಂದ್ರ ಎಂದು ಯೋಚಿಸುವಂತೆ ಮಾಡುತ್ತೇ ಅವರುಗಳ ಧ್ವನಿ ಕೇಳಿದಾಗ!  


ಇದೆ ವಾಹಿನಿಯ ಉಷಾ ಶೈಲಿ ನನಗೆ ತುಂಬಾ ಇಂಪ್ರೆಸ್ ಮಾಡಿದೆ. ಸರಳವಾಗಿ , ಸ್ಪಷ್ಟವಾಗಿ ವಿವರಣೆ ನೀಡುವ ಈಕೆ ಬಗ್ಗೆ ಸ್ವಲ್ಪ ಜಾಸ್ತೀನೆ ಗಮನ. ಟೀವಿ ನೈನ್ ನ ಸಮೀನಾ, ಉಷಾ, ಶೀತಲ್, ರಾಧಿಕ   ಹಾಯಾಗಿ ಒಂದೇ ಕಡೆ , ಅದೂ ಒಂದೇ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಾ  ಇದ್ದಾರೆ. ಅದೂ ಒಳ್ಳೇದು ಅಲ್ವೇ !


ಒಂದೇ ರೀತಿಯ ಕಾರ್ಯಕ್ರಮ ಅನ್ನುವಾಗ  ನೆನಪಿಗೆ ಬರುವುದು ಸೋನಿ ವಾಹಿನಿಅರ್ಚನಾ ಪೂರಣ್ ಸಿಂಗ್. ಕಾಮಿಡಿ ಸರ್ಕಲ್ ತೀರ್ಪುಗಾರ್ತಿ . ಆಕೆಯು ಜನರಿಗೆ ವೀಕ್ಷಕರ ಮುಂದೆ  ಅನೇಕ ವರ್ಷಗಳಿಂದ ತೀರ್ಪುಗಾರ್ತಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ವರ್ಷಗಳಿಂದ ವೀಕ್ಷಕರು ಸಹ ಆಕೆಯನ್ನು ಸ್ವೀಕರಿಸಿದ್ದಾರೆ. ನಾನಂತೂ ಆಕೆ ಅಹಹಅ ಅಹಹ ಅಹ್ಹ ಅಹ್ಹ  ನಗುವಿಗೆ ಫಿದಾ. ಕಣ್ಣಲ್ಲಿ ಒಂದು ಚೂರು ಭಾವನೆ ಇರೋದೇ ಇಲ್ಲ, ಕೆಲವು ಬಾರಿ ನಗುತ್ತಿದ್ದರೂ ಮುಖದ ಭಾವ ವ್ಯಾಕ್ ಅನ್ನೋ ರೀತಿ ಇರುತ್ತೆ.. ಇಂತಹ ಪ್ರತಿಭೆ ಎಲ್ಲಿದ್ದಾರೆ ಹೇಳಿ ?  

ಛೇ ;-) :(...

ಕೆಲವು ಆಶ್ಚರ್ಯ ಗಳು ಅಂದ್ರೆ ನಾವು ಹೇಳುವ ಅನೇಕ ಸಂಗತಿಗಳು ನಿಜಗಳಾಗಿ ಬಿಡುತ್ತೆ . ಅಯ್ಯೋ ಅಯ್ಯೋ ನಿಜ ಕಣ್ರೀ .ನಿನ್ನೆ ಕಸ್ತೂರಿ ನ್ಯೂಸ್ ನಲ್ಲಿ ದೆವ್ವದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಅದನ್ನು ನಿರೂಪಣೆ ಮಾಡ್ತಾ ಇದ್ದ ಹೆಣ್ಣುಮಗಳು ದೆವ್ವದ ಬಗ್ಗೆ ವಿವರಣೆ ನೀಡ್ತಾ ಇದ್ದರು. ಬ್ಯಾಟರಾಯನ ಪುರದಲ್ಲಿ ಇರುವ ಒಂದು ಮರದಲ್ಲಿ ಹೆಣ್ಣು ಮುಖ  ಪ್ರತ್ಯಕ್ಷ ಆಗುತ್ತಂತೆ . ಸಂಜೆ ಹೊತ್ತು ಯಾರಿಗೂ ಅಲ್ಲಿಗೆ ಹೋಗೋಕೆ ಭಯ.ಈ ಕಾರ್ಯಕ್ರಮ ಆದಸ್ವಲ್ಪ ಸಮಯದ  ಬಳಿಕ ಏನಾಯ್ತು ಅಂದ್ರೆ ಈ ಮರದ ಲೈವ್ ಅಯ್ಯೊ ಅಯ್ಯೋ ಅದರ ಮುಂದೆ ವರದಿಗಾರ್ತಿ ದೆವ್ವದ ಮಹಿಮೆ ಗುಣಗಾನ ಮಾಡ್ತಾ ಇದ್ದರೆ , ಸ್ಟುಡಿಯೋದಲ್ಲಿ ಅದೇ ಬೆಳಗಿನಿಂದ ದೆವ್ವದ ಗುಣಗಾನ ಮಾಡುತ್ತಿದ್ದಾಕೆ ಆಕೆಗೆ ಪ್ರಶ್ನೆಗಳ ಸುರಿಮಳೆ ಮಾಡುತ್ತಾ ...  :-).  ಮೋಹಿನಿ ಕಾಟ ಬ್ಯಾಡ ಅಂತ ಗಂಡುಮಕ್ಕಳು ಮರದತ್ತ ಸುಳಿಯದೇ ಹೆಣ್ಣು ಹೈಕ್ಲಿಗಳನ್ನು ದೆವ್ವದ ಬಳಿ  ಬಿಟ್ಟಿದ್ದು ಕಂಡಾಗ ನನಗೆ ಅನ್ನಿಸಿದ್ದು ಛೆ ;-)



ಸುವರ್ಣ  ನ್ಯೂಸ್ ನಲ್ಲಿ ವಿಜಯಲಕ್ಷ್ಮಿ ನಡೆಸಿಕೊಡುವ ಸುವರ್ಣ ಫೋಕಸ್ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ನಿನ್ನೆ ಕನಕಪುರದ ಲೂಮ್ಸ್ ಗಳಲ್ಲಿ ಇರುವ ಜೀತಪದ್ದತಿ ಬಗ್ಗೆ ತಿಳಿದಂತಹ ಕಾರ್ಯಕ್ರಮ ಕಂಡು ಖೇದ ಅನ್ನಿಸಿತು. ಬೆಂಗಳೂರಿನ ಸಮೀಪ ಇಂತಹ ವಾತಾವರಣ ಛೇ  :(. ವಿಜಯಲಕ್ಷ್ಮಿ ಈ ಕಾರ್ಯಕ್ರಮದಲ್ಲಿ ಓದಿದಂತೆ ಧ್ವನಿ ನೀಡುವುದಕ್ಕಿಂತ ಮಾತನಾಡಿದಂತೆ ಹೇಳಿದರೆ ಒಳಿತು .